
| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.
ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ `ಮೇಳಿಗೆ` ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).
`ದೂರ್ವಾಸಪುರ`ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.
ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ `ಮಣಿಪಾಲ್ ಆಸ್ಪತ್ರೆ`ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ `ಜ್ಞಾನಭಾರತಿ ಕಲಾಗ್ರಾಮ`ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು. ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.
|
ಯು.ಆರ್. ಅನಂತಮೂರ್ತಿಯವರು ಹುಟ್ಟಿದ್ದು ೧೯೩೨ರಲ್ಲಿ, ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. ೧೯೫೬ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು; ೧೯೬೩ರಲ್ಲಿ ಕಾಮನ್ವೆಲ್ತ್ ಫೆಲೊಶಿಪ್ ಪಡೆದು ಇಂಗ್ಲೆಂಡಿಗೆ ಹೋಗಿ ಬರ್ಮಿಂಗಂ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಗಳಿಸಿದರು; ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಮೈಸೂರಿನ ರೀಜನಲ್ ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು; ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ, ಕಾರ್ನೆಗಿ ವಿಶ್ವವಿದ್ಯಾಲಯದಲ್ಲಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಫುಲ್ಬ್ರೈಟ್ ಪ್ರೊಫೆಸರ್ ಆಗಿ ಬೋಧಿಸಿದರು; ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ, ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ನಿರ್ದೇಶಕ, ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಸಂಸ್ಕಾರ ಅನಂತಮೂರ್ತಿಯವರ ಮೊದಲ ಕಾದಂಬರಿ. ಇದು ಭಾರತದ ಭಾಷೆಗಳಿಗಲ್ಲದೆ, ಯೂರೋಪಿನ ಹಾಗೂ ಏಷ್ಯದ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ; ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ. ಎಂದೆಂದೂ ಮುಗಿಯದ ಕಥೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಕ್ಕು, ಸೂರ್ಯನ ಕುದುರೆ, ಪಚ್ಚೆ ರಿಸಾರ್ಟ್ ಅವರ ಮುಖ್ಯ ಕಥಾ ಸಂಕಲನಗಳು. ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ, ಶತಮಾನದ ಕವಿ ಯೇಟ್ಸ್, ಶತಮಾನದ ಕವಿ ರಿಲ್ಕೆ ಅವರ ಕವನ ಸಂಕಲನಗಳು. ಭಾರತೀಪುರ, ಅವಸ್ಥೆ, ಭವ, ದಿವ್ಯ ಅವರ ಇತರ ಕಾದಂಬರಿಗಳು. ಪ್ರಜ್ಞೆ ಮತ್ತು ಪರಿಸರ, ಸನ್ನಿವೇಶ, ಸಮಕ್ಷಮ, ಪೂರ್ವಾಪರ, ಬೆತ್ತಲೆ ಸೇವೆ ಯಾಕೆ ಕೂಡದು?, ಯುಗಪಲ್ಲಟ, ನವ್ಯಾಲೋಕ, ವಾಲ್ಮೀಕಿಯ ನೆವದಲ್ಲಿ, ಆಚೀಚೆ, ಮಾತು ಸೋತ ಭಾರತ, ಕಾಲಮಾನ ಮೊದಲಾದ ವಿಮರ್ಶಾತ್ಮಕ ಚಿಂತನಪರ ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಅನಂತಮೂರ್ತಿಯವರು ಪಡೆದಿರುವ ಪ್ರಶಸ್ತಿ ಪುರಸ್ಕಾರಗಳಲ್ಲಿ ಹಲವು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್, ಹೋಮಿಬಾಬಾ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಮುಖ್ಯವಾದುವು. ೨೦೦೨ರಲ್ಲಿ ಅವರು ತುಮಕೂರಿನಲ್ಲಿ ನಡೆದ ೬೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
|
|
| |
|
|
|
|